ಪುಟಗಳು

ಭಾನುವಾರ, ಮಾರ್ಚ್ 6, 2011

ನಾರಾಯಣ ಮೂರ್ತಿ ಅವರಿಂದ ಏನ್ ಕಲಿಬೇಕು, ಏನ್ ಬೇಡ ?

ವಸಂತ್ ಶೆಟ್ಟಿ , ಬೆಂಗಳೂರು

ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ಇನ್ ಫೋಸಿಸ್ ನ ನಾರಾಯಣ ಮೂರ್ತಿ "ಅವರನ್ನು ಆಯ್ಕೆ ಮಾಡಿದ ಸರ್ಕಾರದ ಕ್ರಮ ತಪ್ಪೆಂದೂ, ಅವರೊಬ್ಬ ಉದ್ಯಮಿಯೇ ಹೊರತು ಕನ್ನಡಕ್ಕೆ ಅವರ ಕೊಡುಗೆ ಶೂನ್ಯ" ಅಂತಲೂ ಅವರ ಆಯ್ಕೆಯ ಬಗ್ಗೆ ಅಪಸ್ವರ ಎದ್ದ ಸುದ್ದಿ ಪತ್ರಿಕೆಗಳಲ್ಲಿ,ಟಿವಿಗಳಲ್ಲಿ ನೋಡಿದೆ. ಅದೇ ಸಮಯಕ್ಕೆ ಕೆಲವು ಪತ್ರಿಕೆಗಳಲ್ಲಿ "ಅವರೊಬ್ಬ ಉದ್ಯಮಿ, ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ, ಅವರ ಆಯ್ಕೆಯನ್ನು ವಿರೋಧಿಸಿರುವವರು ಕನ್ನಡಕ್ಕೆ ಏನ್ ಮಾಡಿದ್ದಾರೆ?" ಎಂದು ಮೂರ್ತಿ ಅವರ ಆಯ್ಕೆಯನ್ನು ಸಮರ್ಥಿಸುವ ಸುದ್ದಿಯನ್ನು ಕಂಡೆ. ಕರ್ನಾಟಕದ ಸಮಾಜಕ್ಕೆ ಮೂರ್ತಿ ಅವರ ಕೊಡುಗೆ ಏನೇನು ಇಲ್ಲ ಅನ್ನುವುದು ಎಷ್ಟು ತಪ್ಪೋ, ಮೂರ್ತಿ ಅವರ ಪರವಾಗಿ ಬರೆಯುವ ಆತುರದಲ್ಲಿ ಕನ್ನಡ, ಕರ್ನಾಟಕದ ಬಗ್ಗೆ ಅವರು ಮಾತಾಡಿದ್ದು, ಮಾಡಿದ್ದೆಲ್ಲ ಸರಿ ಅನ್ನುವ ಧೋರಣೆಯೂ ಅಷ್ಟೇ ತಪ್ಪು.

ಮೂರ್ತಿಯವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ !

ಅತ್ಯಂತ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿದ್ದರೂ, ಜಾಗತೀಕರಣದ ನಂತರ ತೆರೆದ ಮಾರುಕಟ್ಟೆ ಕೊಡ ಮಾಡುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ, ಪ್ರತಿಭೆ, ಪರಿಶ್ರಮಕ್ಕೆ ಬೆಲೆ ಕೊಡುವ ವ್ಯವಸ್ಥೆಯೊಂದನ್ನು ಕಟ್ಟಬಹುದು ಮತ್ತು ಆ ಮೂಲಕ ದೊಡ್ಡ ಮಟ್ಟದಲ್ಲಿ ಕೆಲಸ ಮತ್ತು ಸಂಪತ್ತು ಸೃಷ್ಟಿಸಬಹುದು ಹಾಗೂ ಆ ಮೂಲಕ ದೊಡ್ಡ ಮಟ್ಟದಲ್ಲಿ ಜನರ ಜೀವನದ ಆರ್ಥಿಕ ಮಟ್ಟ ಸುಧಾರಿಸಬಹುದು ಅನ್ನುವುದನ್ನು ತೋರಿಸಿಕೊಟ್ಟ ಶ್ರಮಜೀವಿ ಕನಸುಗಾರರಲ್ಲಿ ಇವರೂ ಒಬ್ಬರು. ಉದ್ಯಮಶೀಲತೆಯ ಅಪಾರ ಕೊರತೆ ಅನುಭವಿಸುತ್ತಿರುವ ಕನ್ನಡನಾಡಿನ ಯುವ ಜನತೆಗೆ ದೊಡ್ಡದಾಗಿ ಯೋಚಿಸುವ, ಕನಸು ಕಾಣುವ, ಆ ಕನಸಿನ ಬೆನ್ನತ್ತಿ ಶ್ರಮ ಪಟ್ಟರೆ ಎಂತಹ ಯಶಸ್ಸು ಸಾಧಿಸಬಹುದು ಅನ್ನುವ ನಂಬಿಕೆಯನ್ನು ಇನ್ ಫೋಸಿಸ್ ನ ಯಶಸ್ಸಿನ ಮೂಲಕ ಬಿತ್ತಿದ ಉದ್ಯಮಿ ನಮ್ಮ ನಾರಾಯಣ ಮೂರ್ತಿಯವರು. 

ಅವರ ಶ್ರಮ, ಮುಂದಾಲೋಚನೆ ಅವರಿಗಷ್ಟೇ ಗೆಲುವು ತರಲಿಲ್ಲ. ದೊಡ್ಡ ಮಟ್ಟದಲ್ಲಿ ಐಟಿ ಕ್ರಾಂತಿಗೂ ಅದು ಸ್ಪೂರ್ತಿಯಾಯಿತು. ಲಕ್ಷಗಟ್ಟಲೆ ಜನರಿಗೆ ಉದ್ಯೋಗ ಕಲ್ಪಿಸುವ ಆ ಮೂಲಕ ದೊಡ್ಡ ಮಟ್ಟದಲ್ಲಿ ಅವರ ಆರ್ಥಿಕ ಮಟ್ಟದ ಸುಧಾರಣೆಗೆ ಅದು ಇಂಬು ನೀಡಿತು. ಆದ್ದರಿಂದಲೇ ಇಡೀ ಕನ್ನಡ ಸಮಾಜ ಅವರ ಸಂಸ್ಥೆಗೂ, ಅವರಿಗೂ ಎತ್ತರದ ಸ್ಥಾನಮಾನ, ಗೌರವವನ್ನು ಕಲ್ಪಿಸಿತ್ತೆನ್ನಬಹುದು. ಒಬ್ಬ ಉದ್ಯಮಿಯಾಗಿ ಏನ್ ಮಾಡಬಹುದೋ ಅದನ್ನು ಅವರು ಮಾಡಿದರು ಅನ್ನಲು ಅಡ್ಡಿಯಿಲ್ಲ. ಆ ವಿಷಯದಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲೂ ಬೇಕು.

ಮೂರ್ತಿ ಅವರಿಗೆ ಅರ್ಥವಾಗದ ಕನ್ನಡ ಸಮಾಜ !
ಒಬ್ಬ ಸಾಹಿತಿ, ನಟ ಹೇಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೋ ಅಂತೆಯೇ ಮೂರ್ತಿಯವರು ತಮ್ಮ ಉದ್ಯಮದಲ್ಲಿ ಕೆಲಸ ಮಾಡಿ ಗುರುತರವಾದದ್ದನ್ನು ಸಾಧಿಸಿದ್ದಾರೆ. ಅದನ್ನು ಅಷ್ಟಕ್ಕೆ ಸೀಮಿತಗೊಳಿಸಿ ನೋಡಬೇಕು. ಆದರೆ ಯಾರಾದ್ರೂ ಗೆಲುವು ಕಂಡ್ರೆ, ಎಲ್ಲದಕ್ಕೂ ಅವರ ಸಲಹೆ ಕೇಳುವುದು ನಮ್ಮ ಸಮಾಜ, ಸರ್ಕಾರಕ್ಕಂಟಿರುವ ಊನವೆನ್ನಬಹುದು. ಅದರಂತೆ ಅವರ ಸಂಸ್ಥೆಯ ಯಶಸ್ಸು ಕಂಡ ನಮ್ಮ ಜನ, ನಮ್ಮ ಮಾಧ್ಯಮದವರು ಕನ್ನಡ ನಾಡಿನ ಏಳಿಗೆ, ಭವಿಷ್ಯದ ಬಗ್ಗೆಯೂ ಅವರ ಅಭಿಪ್ರಾಯ, ಸಲಹೆ ಕೇಳಿದಾಗಲೇ ಕನ್ನಡ ಸಮಾಜವನ್ನು, ಅದರ ಅಗತ್ಯಗಳನ್ನು ಅವರು ಅರ್ಥೈಸಿಕೊಂಡಿರುವ ರೀತಿಯಲ್ಲಿರುವ ತೊಂದರೆ ಎಂತದ್ದು ಅನ್ನುವುದು ಗಮನಕ್ಕೆ ಬಂದಿದ್ದು. ಮೂರ್ತಿಯವರ ಪ್ರಕಾರ ಇಂಗ್ಲಿಷ್ ಒಂದೇ ನಮ್ಮ ನಾಡನ್ನು ಪ್ರಪಂಚದ ಮುಂಚೂಣಿಗೆ ತಂದು ನಿಲ್ಲಿಸಬಲ್ಲಂತದು. ಈ ನಾಡಿಗೆ ಭವಿಷ್ಯ ಬೇಕಾ, ಇಂಗ್ಲಿಷ್ ಅಪ್ಪಿಕೊಳ್ಳಿ ಇಲ್ಲದಿದ್ದರೆ ಉಳಿಗಾಲವಿಲ್ಲ ಅನ್ನುವ ತಪ್ಪು ಧೋರಣೆ ಅವರದ್ದು. "ಕನ್ನಡ ಮಾಧ್ಯಮ ಶಾಲೆಗಳನ್ನೆಲ್ಲ ಮುಚ್ಚಿ, ಇಂಗ್ಲಿಷ್ ಶಾಲೆ ತೆರೆಯಿರಿ" ಜಾಗತೀಕರಣವನ್ನು ಎದುರಿಸಲು ಇಂಗ್ಲಿಷ್ ಒಂದೇ ಸಾಧನ ಅನ್ನುತ್ತ ಜಗತ್ತೇ ಒಪ್ಪಿರುವ ತಾಯ್ನುಡಿ ಶಿಕ್ಷಣದ ಜಾಗದಲ್ಲಿ ಇಂಗ್ಲಿಷ್ ಕಲಿಕಾ ವ್ಯವಸ್ಥೆ ತರುವುದನ್ನು ಬೆಂಬಲಿಸಿ ಕನ್ನಡದ ಮಕ್ಕಳ ಕಲಿಕೆಯ ಈ ದಿನದ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಕತ್ ಆಗೇ ಎಡವಿದರು.


ಕನ್ನಡ ಸಮಾಜವೊಂದೇ ಅಲ್ಲ, ಭಾರತವೆಂಬ ಒಕ್ಕೂಟವೂ ಅವರಿಗರ್ಥವಾಗಿಲ್ಲ !

ಬೆಂಗಳೂರಿನಲ್ಲಿ ಇವರ ಸಂಸ್ಥೆಯ ಏಳಿಗೆಗೆ ಸರ್ಕಾರದ ಕೊಡುಗೆ ಕಡಿಮೆಯೇನಲ್ಲ. ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನ ಪಡೆದಿದ್ದರೂ (ನೆಲ, ಜಲ, ತೆರಿಗೆ ವಿನಾಯಿತಿ) ನಗರದ ಮೂಲಭೂತ ಸೌಕರ್ಯ ಸರಿಯಿಲ್ಲ, ಅದರಿಂದ ಅನಾನುಕೂಲವಾಗಿದೆ,, ಆದ್ದರಿಂದ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿದರೆ ಹೆಚ್ಚು ಅನುಕೂಲ ಅನ್ನುವ ಧಾಟಿಯಲ್ಲಿ ಮಾತನಾಡಿದ್ದು ಮೂರ್ತಿಯವರೇ. ತಮಗೆ ಒಂದಿಷ್ಟು ಅನಾನುಕೂಲವಾಯಿತು ಎಂದು ಬೆಂಗಳೂರನ್ನು ಕರ್ನಾಟಕದಿಂದ ಬೇರ್ಪಡಿಸಿ ಅನ್ನುವುದು ಭಾರತವೆಂಬ ಒಕ್ಕೂಟ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡವರು ಆಡುವ ಮಾತೇ? ಬೆಂಗಳೂರನ್ನು ಕೇಂದ್ರಕ್ಕೆ ವರ್ಗಾಯಿಸೋ ಬದಲು ಅಮೇರಿಕಕ್ಕೆ ವರ್ಗಾಯಿಸಿದರೆ ಇನ್ನೂ ಒಳ್ಳೆದಲ್ವಾ? ಎಷ್ಟಂದರೂ ಅವರು ಒಳ್ಳೆ ಮೂಲಭೂತ ಸೌಕರ್ಯ ಕಲ್ಪಿಸುವುದರಲ್ಲಿ ಜಗತ್ತಿಗೆ ದೊಡ್ಡವರಲ್ವಾ. ನಮ್ಮ ಆಡಳಿತದಲ್ಲಿ ಒಂದಿಷ್ಟು ತೊಂದರೆ ಇದೆ ಅಂದಾಕ್ಷಣ ಭಾರತದ ಒಕ್ಕೂಟದ ಸ್ವರೂಪವನ್ನೇ ಬದಲಾಯಿಸಿ ಅನ್ನುವವರಿಗೆ ಭಾರತವೆಂಬ ಒಕ್ಕೂಟ ವ್ಯವಸ್ಥೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಅನ್ನಿಸಲ್ವಾ?

ಹೋಗಲಿ, ಇವರ ಸಂಸ್ಥೆಯಲ್ಲೇ ಕನ್ನಡದ ಸ್ಥಿತಿ ಹೇಗಿದೆ?

ಇವರ ಸಂಸ್ಥೆಯ ಮಂಗಳೂರು, ಮೈಸೂರು, ಬೆಂಗಳೂರು ಕೇಂದ್ರಗಳಲ್ಲಿ ಕನ್ನಡ, ಕನ್ನಡಿಗರ ಸ್ಥಿತಿ ಹೇಗಿದೆ? ನಿಜಕ್ಕೂ ಅಷ್ಟೇನು ಚೆನ್ನಾಗಿಲ್ಲ ಅಂತಾರೆ ಅಲ್ಲಿ ಕೆಲಸ ಮಾಡುವ ಗೆಳೆಯರು. ಒಂದು ಚಿಕ್ಕ ಕನ್ನಡ ಕಲಿ ಕಾರ್ಯಕ್ರಮ ಮಾಡುವುದಾಗಿರಬಹುದು, ಇಲ್ಲವೇ ಕನ್ನಡ ರಾಜ್ಯೋತ್ಸವ ಆಚರಿಸುವುದಿರಬಹುದು. ಅಲ್ಲಿನ ಕನ್ನಡಿಗರು ಎಷ್ಟು ಕಷ್ಟ ಪಟ್ಟು ದಕ್ಕಿಸಿಕೊಂಡಿದ್ದಾರೆ ಅನ್ನುವುದನ್ನು ಬಲ್ಲವರೇ ಬಲ್ಲರು. ಯಾಕೆ ಹೀಗಿದೆ? ಇದಕ್ಕೆ ಮೂರ್ತಿಯವರ indifference ಕಾರಣ ಅನ್ನಿಸಲ್ವಾ? ಕನ್ನಡ ಪರವಾಗಿರೋದು ಬೇಡ, ಕೊನೆ ಪಕ್ಷ ಇಂತಹದೊಂದು ಲೆಕ್ಕಕ್ಕಿಲ್ಲ ಅನ್ನುವ ಧೋರಣೆಯನ್ನು ಇವರು ತೋರಿಸದೇ ಇದ್ದಿದ್ದರೆ ಆ ಸಂಸ್ಥೆಯಲ್ಲಿ ಹಿರಿಯ ಹುದ್ದೆಯಲ್ಲಿರುವ ಪರಭಾಷಿಕರು ಇಂತಹದೊಂದು ಧೋರಣೆ ತೋರಿಸುತ್ತಿದ್ದರೇ? ಇನ್ಫಿಯ ಮಂಗಳೂರು, ಮೈಸೂರು ಕೇಂದ್ರದಲ್ಲಿ ಮಲಯಾಳಿಗಳದ್ದೇ ಕಾರುಭಾರು ಎಂದು ಕೇಳ್ಪಟ್ಟೆ. ಪ್ರತಿಭೆಯೊಂದೇ ಮಾನದಂಡ ಅಂತ ಇವರೆನೋ ಅನ್ನುತ್ತಾರೆ, ಹಾಗಾದ್ರೆ ಇಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ ಇದೆ ಅನ್ನುವುದು ಏನ್ ತೋರಿಸುತ್ತೆ ? ನಮಗೆ ಪ್ರತಿಭೆಯೇ ಇಲ್ಲವೆಂತಲೋ ಇಲ್ಲ ಮಲೆಯಾಳಿಗಳಿಗೆ ಮಾತ್ರ ಪ್ರತಿಭೆ ಇದೆ ಅಂತಲೋ? ಕಾಕತಾಳೀಯವೆಂಬಂತೆ ಈ ಕೇಂದ್ರದ ಹೆಚ್ಚಿನ ಹಿರಿಯ ಅಧಿಕಾರಿಗಳು ಮಲೆಯಾಳಿಗಳು ಅಂತಲೂ ಕೇಳ್ಪಟ್ಟೆ :) . 

ನಾರಾಯಣ ಮೂರ್ತಿ ಅವರಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಅನ್ನುವುದು ಎಷ್ಟು ಸರಿಯೋ, ಕಣ್ಣು ಮುಚ್ಚಿ ಅವರನ್ನು ರೋಲ್ ಮಾಡೆಲ್ ಅಂತ ಒಪ್ಪಿಕೊಳ್ಳುವುದು, ಸಮಾಜದ ಬಗ್ಗೆ ಅವರು ಕೊಡುವ ಟಿಪ್ಪಣಿಯನ್ನು ಪರಿಶೀಲಿಸದೆ ವೇದ ವಾಕ್ಯವೆಂಬಂತೆ ಕಣ್ಣಿಗೊತ್ತಿಕೊಳ್ಳುವುದು ಅಷ್ಟೇ ತಪ್ಪು.


0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮದ ನೇರ ಪ್ರಸಾರ........